ಬೆಳಗಾವಿ : ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ಅವರಿಂದ ಸುಮಾರು ₹1.80 ಲಕ್ಷ ಮೌಲ್ಯದ ಗಾಂಜಾ, ಮೊಬೈಲ್ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಅಕ್ಷಯಕುಮಾರ ಸೋಮಶೇಖರ ಅಂಕಲಗಿ (20), ಆದರ್ಶ ಈರಯ್ಯ ಹಿರೇಮಠ (25) ಹಾಗೂ ಮಣಿಕಂಠ ರಾಚಯ್ಯಾ ಉಗರಖೋಡ (20) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಕಿತ್ತೂರು ನಿವಾಸಿಗಳಾಗಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಬೆಳಗಾವಿಯ ನಿವಾಸಿಯಾಗಿರುವ ಮೈತಾಬ್ ಎಂಬಾತನಿಂದ ಗಾಂಜಾವನ್ನು ತಂದು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದ ಸಾಗರ ಕಿನಾರಾ ಧಾಬಾ ಸಮೀಪ ಬೈಕ್ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ನಡೆಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಆರೋಪಿಗಳಿಂದ 1 ಕೆಜಿ 100 ಗ್ರಾಂ ಗಾಂಜಾ, ವಿವೋ ಕಂಪನಿಯ ಮೊಬೈಲ್ ಫೋನ್ ಹಾಗೂ ಹೀರೋ ಎಕ್ಸ್ಟ್ರೀಮ್ ಬೈಕ್ ಸೇರಿದಂತೆ ಒಟ್ಟು ₹1.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ಅವರ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು.
ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 124/2026 ಅಡಿಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 20(b)(ii)(B) ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.









